ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣ: ಮಾಜಿ ಸಚಿವ ಪಿ. ಚಿದಂಬರಂ, ಮಗ ಕಾರ್ತಿಗೆ ಸಮನ್ಸ್

Last Updated 27 ನವೆಂಬರ್ 2021, 11:40 IST
ಅಕ್ಷರ ಗಾತ್ರ

ನವದೆಹಲಿ: ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಸಿರುವ ದೋಷಾರೋಪಪಟ್ಟಿಯನ್ನು ಪರಿಶೀಲಿಸಿದ ದೆಹಲಿ ಕೋರ್ಟ್, ಡಿಸೆಂಬರ್ 20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮತ್ತು ಅವರ ಮಗ ಕಾರ್ತಿಗೆ ಸಮನ್ಸ್ ಜಾರಿ ಮಾಡಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಚಿದಂಬರಂ ಮತ್ತು ಇತರ ಆರೋಪಿಗಳ ವಿರುದ್ಧ ಸಮರ್ಪಕ ಸಾಕ್ಷಿಗಳು ಲಭ್ಯವಿವೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ. ನಾಗಪಾಲ್ ಅಭಿಪ್ರಾಯಪಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಚಿದಂಬರಂ ಮತ್ತು ಅವರ ಮಗ ಕಾರ್ತಿಯವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.

ತನಿಖೆಗೆ ಪೂರಕವಾಗಿ ಅಗತ್ಯ ಮಾಹಿತಿ ಒದಗಿಸಲು ಕೋರಿ ಬ್ರಿಟನ್‌ ಮತ್ತು ಸಿಂಗಪುರ ಕೋರ್ಟ್‌ಗೆ ಪತ್ರ ಬರೆಯಲಾಗಿದೆ. ಈ ವಿಷಯದಲ್ಲಿ ಭಾಗಶಃ ಪ್ರಗತಿ ಕಾಣಿಸಿಕೊಂಡಿದೆ ಎಂದು ಇದಕ್ಕೂ ಮುನ್ನ ತನಿಖಾ ಸಂಸ್ಥೆಗಳ ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದರು. ವಿದೇಶಿ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಮಾಹಿತಿ ಕೋರಿ ಕೋರ್ಟ್‌ ಮೂಲಕವೇ ಪತ್ರ ಕಳುಹಿಸಲಾಗುತ್ತದೆ.

ವಿಚಾರಣೆಯ ವೇಳೆ ಜಾರಿ ನಿರ್ದೇಶನಾಲಯವನ್ನು (ಇ.ಡಿ) ವಿಶೇಷ ಅಭಿಯೋಜಕ ಎನ್‌.ಕೆ.ಮಟ್ಟಾ, ಸಿಬಿಐ ಪರವಾಗಿ ವಕೀಲ ನೂರ್‌ ರಾಮಪಾಲ್‌ ಹಾಜರಿದ್ದರು. 2006ರಲ್ಲಿ ಪ್ರಕರಣ ನಡೆದಿದ್ದು, ಆಗ ಚಿದಂಬರಂ ವಿತ್ತ ಸಚಿವರಾಗಿದ್ದರು.

₹3500 ಕೋಟಿ ಮೊತ್ತದ ಹಗರಣ ಇದಾಗಿದ್ದು, ಚಿದಂಬರಂ ಅವರನ್ನು ಮೊದಲನೇ ಆರೋಪಿ ಎಂದು ಹೆಸರಿಸಲಾಗಿದೆ. ಪ್ರಕರಣವನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದು, ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿವೆ.

2006ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ವೇಳೆ ಚಿದಂಬರಂ ಅವರು ವಿದೇಶಿ ಕಂಪನಿಗೆ 'ವಿದೇಶಿ ಹೂಡಿಕೆ ಪ್ರಚಾರ ಮಂಡಳಿ'ಯ (ಎಫ್‌ಐಪಿಬಿ) ಮಂಜೂರಾತಿ ನೀಡಿದ್ದು ಹೇಗೆ ಎಂಬ ಕುರಿತು ಸಿಬಿಐ ತನಿಖೆ ನಡೆಸಿತ್ತು. ಮ್ಯಾಕ್ಸಿಸ್‌ನ ಅಂಗಸಂಸ್ಥೆ ಮಾರಿಷಸ್ ಮೂಲದ ಗ್ಲೋಬಲ್ ಕಮ್ಯುನಿಕೇಷನ್ ಸರ್ವೀಸಸ್ ಹೋಲ್ಡಿಂಗ್ಸ್‌ಗೆ ಮಂಜೂರಾತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT